
ಬಾಂಬ್, ಕ್ಷಿಪಣಿ ಸ್ಫೋಟ ಸಹಿತ ವಿವಿಧ ಪ್ರಯೋಗಗಳನ್ನು ಯುದ್ಧರಂಗದಲ್ಲಿ ನಡೆಸುವಾಗ ಮಾನವ ಬಳಕೆ ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಕೆಲಸ ಮಾಡುವ ‘ಎಫ್ಡಬ್ಲ್ಯುಡಿ–ಬಾಂಬರ್’ ಇದರ ಪ್ರತಿಕೃತಿಯು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೆಚ್ಚು ಆಕರ್ಷಣೆಗೆ ಪಾತ್ರವಾಗಿತ್ತು.ಭಾರತದ ಪ್ರಥಮ ಇಂಡೀಜಿನಿಯಸ್ ಏರ್ಕ್ರಾಫ್ಟ್ ಎಂದು ಹೆಸರು ಪಡೆದಿರುವ ಈ ಬಾಂಬರ್ ಅನ್ನು ಎಲೆಕ್ಟ್ರಾನಿಕ್ಸ್ ಸಿಟಿಯ ‘ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆ್ಯಂಡ್ ಏರೊಸ್ಪೇಸ್’ ಕಂಪನಿ ತಯಾರಿಸಿದೆ. ಲೇಸರ್ ಗೈಡೆಡ್ ರಾಕೆಟ್, ಕ್ಯಾಮೆರಾ ಮತ್ತು ಸಂವಹನ, ನೈಜ ಸಮಯದ ಕಾರ್ಯಾಚರಣೆ, ಗಡಿ ಭದ್ರತೆ, ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾದ ಮಾನವರಹಿತ ಯುದ್ಧ ವೈಮಾನಿಕ ವಾಹನ (ಯುಎವಿ) ಇದಾಗಿದೆ. 5 ಮೀಟರ್ ಉದ್ದ ಇರುವ ‘ಬಾಂಬರ್’ 102 ಕೆ.ಜಿ. ಭಾರವನ್ನು ಸಾಗಿಸಬಲ್ಲದು. ಒಮ್ಮೆ ಇಂಧನ ತುಂಬಿಸಿದರೆ 24 ಗಂಟೆ ಹಾರಾಟನಡೆಸಬಲ್ಲ ಸಾಮರ್ಥ್ಯ ಇರುವ ಈ ವೈಮಾನಿಕ ವಾಹನವನ್ನು ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲ, ತುರ್ತು ಸ್ಥಿತಿಯಲ್ಲಿ ಅತಿವೇಗದಲ್ಲಿ ಔಷಧ ಸಾಗಾಟಕ್ಕೆ ಬಳಕೆ ಮಾಡಬಹುದು. ಇನ್ನಿತರ ಅಗತ್ಯ ಸಂದರ್ಭದಲ್ಲಿಯೂ ಉಪಯೋಗಿಸಬಹುದು ಎಂದು ಕಂಪನಿಯ ಸಿಒಒ ನರಸಿಂಹ ಅವರು ಮಾಹಿತಿ ನೀಡಿದರು.
‘ಮಾನವರಹಿತ ಯುದ್ಧ ವೈಮಾನಿಕ ವಾಹನದ ವಿನ್ಯಾಸ, ಎಂಜಿನ್ ತಯಾರಿಯಿಂದ ಹಿಡಿದು ಎಲ್ಲವನ್ನೂ ‘ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಆ್ಯಂಡ್ ಏರೊಸ್ಪೇಸ್’ ಕಂಪನಿಯೇ ತಯಾರಿಸಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಯಲಹಂಕದ ಎಲ್ಸಿಯಾದಲ್ಲಿ ತಯಾರಿಸಲಾಗಿದೆ. ನಮ್ಮ ಕಂಪನಿಯು ಡಿಆರ್ಡಿಒ, ಆರ್ಮಿ ಡಿಸೈನ್ ಬ್ಯೂರೊ ಸಹಿತ ವಿವಿಧ ಸಂಸ್ಥೆಗಳೊಂದಿಗೆ ಸಹಭಾಗಿ ಆಗಿದೆ’ ಎಂದು ವಿವರಿಸಿದರು.
‘ಇದರ ಅಂತರರಾಷ್ಟ್ರೀಯ ಬೆಲೆ ₹ 250 ಕೋಟಿ ಆಗಿದ್ದು, ನಾವು ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿರುವುದರಿಂದ ₹ 25 ಕೋಟಿಗೆ ಒದಗಿಸುತ್ತಿದ್ದೇವೆ. ಆಫ್ರಿಕಾದ ಒಂದು ದೇಶಕ್ಕೆ 35 ಬಾಂಬರ್ ಒದಗಿಸಲು ಕಾರ್ಯಾದೇಶ ನೀಡಿದ್ದು, ಮೊದಲ ಬಾಂಬರ್ ಎರಡು ವಾರದ ಒಳಗೆ ಕಳುಹಿಸಲಾಗುವುದು. ದೇಶದ ಹೆಸರನ್ನು ನಾವು ಬಹಿರಂಗಪಡಿಸುವಂತಿಲ್ಲ’ ಎಂದು ಹೇಳಿದರು.
ಕರ್ನಾಟಕದ ಶಕ್ತಿ ಪ್ರತಿಬಿಂಬಿಸಿದ ‘ಆವಿಷ್ಕಾರ’:

ಭಾರತದ ತಂತ್ರಜ್ಞಾನವನ್ನು ವಿಸ್ತಾರಗೊಳಿಸುವ, ಕರ್ನಾಟಕ ಶಕ್ತಿ ಪ್ರತಿಬಿಂಬಿಸುವ ನಾವೀನ್ಯ ಆವಿಷ್ಕಾರಗಳ ಪ್ರದರ್ಶನ ಜಾಗತಿಕ ಹೂಡಿಕೆದಾರರ ಸಮಾವೇಶದ (ಇನ್ವೆಸ್ಟ್ ಕರ್ನಾಟಕ–2025) ಎರಡನೇ ದಿನ ವಿದೇಶಿ ಪ್ರತಿನಿಧಿಗಳ ಆಕರ್ಷಣೆಯ ಕೇಂದ್ರವಾಗಿತ್ತು.ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ, ನಾವೀನ್ಯ ಭವಿಷ್ಯದ ಭಾರತವನ್ನು ಗಮನದಲ್ಲಿ ಇಟ್ಟುಕೊಂಡು ಆಯೋಜಿಸಿದ್ದ ‘ಆವಿಷ್ಕಾರಗಳ ಭವಿಷ್ಯ’ ಪ್ರದರ್ಶನದಲ್ಲಿ 40ಕ್ಕೂ ಹೆಚ್ಚು ಕಂಪನಿಗಳು ನೂತನ ತಂತ್ರಜ್ಞಾನದ ಹಲವು ನಿರ್ಮಾಣಗಳನ್ನು ಪ್ರದರ್ಶಿಸಿದವು.
ವಿದ್ಯುತ್ ಚಾಲಿತ ವಿಮಾನ, ಕಾರುಗಳು, ದ್ವಿಚಕ್ರವಾಹನಗಳು, ಡ್ರೋನ್ ತಂತ್ರಜ್ಞಾನ, ಬಾಂಬರ್ ವಿಮಾನ ಬೆರಗು ಮೂಡಿಸಿದವು. ವೈಮಾಂತರಿಕ್ಷ, ರಕ್ಷಣಾ ಸಾಮಗ್ರಿಗಳ ಜತೆಗೆ, ಕೃಷಿಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಹೊತ್ತು ತರಲಿರುವ ಅಗ್ರಿ-ಟೆಕ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ರೋಗಪತ್ತೆ, ಚಿಕಿತ್ಸೆಗಳನ್ನು ಸುಲಭವಾಗಿಸುವ ಆರೋಗ್ಯಸೇವೆಗಳ ತಂತ್ರಜ್ಞಾನವೂ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಭವಿಷ್ಯದ ತಂತ್ರಜ್ಞಾನ ಬಳಕೆಯ ವಿವಿಧ ಮಜಲುಗಳನ್ನು ತೆರೆದಿಟ್ಟಿತು.
ಟೊಯೊಟ, ಎಂಬೆಸಿ ಗ್ರೂಪ್, ರಾಜ್ಯ ಪ್ರವಾಸೋದ್ಯಮ ಇಲಾಖೆ, ನಿಂಬಸ್, ಸರಳ ಏವಿಯೇಷನ್, ಜಿ.ಇ ಹೆಲ್ತ್ಕೇರ್, ಹೀರೊ ಫ್ಯೂಚರ್ ಎನರ್ಜೀಸ್, ರಿವರ್ ಮೊಬಿಲಿಟಿ, ಸರಳಾ ಏವಿಯೇಶನ್, ಗೆಲಾಕ್ಸಿ ಸ್ಪೇಸ್, ಲ್ಯಾಮ್ ರೀಸರ್ಚ್ ಕಂಪನಿಗಳು ಸೇರಿದಂತೆ ಮರುಬಳಕೆ ಇಂಧನ, ಸೆಮಿಕಂಡಕ್ಟರ್, ಸುಸ್ಥಿರ ತಯಾರಿಕೆಯ ಕಂಪನಿಗಳು ಭಾಗವಹಿಸಿದ್ದವು. ರಾಜ್ಯದ ಸಾಧನೆಗಳನ್ನು ಬಿಂಬಿಸುವ ಪ್ರತ್ಯೇಕ ‘ಕರ್ನಾಟಕ ಪೆವಿಲಿಯನ್’ನ ಕ್ವಿನ್ಸಿಟಿ, ಫ್ಲಯಿಂಗ್ ವೆಡ್ಜ್, ಬೆಲ್ಲಾಟ್ರಿಕ್ಸ್, ಸ್ಕೀಸರ್ವ್, ಫ್ಲಕ್ಸ್ ಆಟೊ ಉದ್ಯಮಗಳ ಪ್ರಾತ್ಯಕ್ಷಿಕೆಗಳು ಪ್ರೇಕ್ಷಕರ ಗಮನ ಸೆಳೆದವು.
‘ಆವಿಷ್ಕಾರಗಳ ಭವಿಷ್ಯ’ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು.

